“ಅದೊ ಹುಲ್ಲಿನ ಮಕಮಲ್ಲಿನ

          ಪೊಸಪಚ್ಚೆಯ  ಜಮಖಾನೆ

ಪಸರಿಸಿ ತಿರೆ ಮೈ ಮುಚ್ಚಿರೆ,

          ಬೇರೆ ಬಣ್ಣವನೇ ಕಾಣೆ!

ಎಂಬ ಕುವೆಂಪುರವರ "ಹಸುರು" ಕವನದ ಆಶಯದಂತೆ ನಮ್ಮ ಕುಂಬಾರಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯು ಹೊಸ ಚಿಗುರಿನ ಹಸಿರು ಹುಲ್ಲು ಆಸನ್ನು ಹೊದಿಸಿಕೊಂಡು ಎಲ್ಲರನ್ನೂ ತನ್ನತ್ತ ಕೈಬಿಸಿ ಕರೆಯುತ್ತಿದೆ.

ಸರ್ಕಾರಿ ಶಾಲೆ ಎಂದರೆ ಈ ರೀತಿಯಲ್ಲೂ ಇರಲು ಸಾಧ್ಯವೇ? ಎಂಬುವಂತೆ ನೋಡುಗರನ್ನ ಮಂತ್ರಮುಗ್ಧರನ್ನಾಗಿಸುತ್ತಿದೆ. ಸರ್ಕಾರಿ ಪ್ರೌಢಶಾಲೆ ಕುಂಬಾರ ಕೊಪ್ಪಲು, ಮೈಸೂರು ಉತ್ತರ.ಇದು 2007ರಲ್ಲಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಾರಂಭವಾಗಿ 2014ರಲ್ಲಿ ಮುಖ್ಯ ಶಿಕ್ಷಕರಾದ ಶ್ರೀಯುತ ಶ್ರೀನಿವಾಸ್ ರವರ ನೇತೃತ್ವದಲ್ಲಿ ಊರಿನವರ ಸಹಕಾರದಿಂದ ನಿಂಗಯ್ಯನಕೆರೆ ಯ ಹೊಸ ಕಟ್ಟಡಕ್ಕೆ ಹೆಜ್ಜೆ ಹಾಕಿತು.      

ವಿಸ್ತಾರವಾದ 12 ಕೊಠಡಿಗಳು, ವಿಶಾಲವಾದ ಮೈದಾನವನ್ನು ಹೊಂದಿದ್ದರು ಸಹ, ಪೂರ್ಣ ಪ್ರಮಾಣದ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಜೊತೆಗೆ ಶಾಲೆಯ ಗೇಟ್ ಊರಿನ ಸ್ಮಶಾನಕ್ಕೆ ಮುಖ ಮಾಡಿದ್ದರಿಂದ 2016ರಲ್ಲಿ ಮುಖ್ಯ ಶಿಕ್ಷಕಿಯಾಗಿ ಬಂದ ನನಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಾಮಾಜಿಕವಾಗಿ, ಭೌತಿಕವಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಶಾಲೆಯು ಊರಿನ ಸ್ಮಶಾನಕ್ಕೆ ಹತ್ತಿರವಾಗಿದ್ದರಿಂದ ಪೋಷಕರು ಮೌಡ್ಯಕ್ಕೆ ಒಳಗಾಗಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದರು ಹಾಗೂ ಶಾಲಾ ಅವಧಿಯ ನಂತರ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಈ ಪರಿಸ್ಥಿತಿಯನ್ನು ಅರಿತ ನಾವೆಲ್ಲರೂ ಶಾಲೆಗೆ ಉತ್ತಮ ಅಡಿಪಾಯ ಹಾಕಲು  ಹಂತ ಹಂತವಾಗಿ ಸರ್ಕಾರದ, ಗ್ರಾಮಸ್ಥರ, ದಾನಿಗಳ ಸಹಕಾರ ಪಡೆಯುತ್ತಾ ಶಾಲೆಯ ಗೇಟಿನ ದಿಕ್ಕನ್ನ ಬದಲಾಯಿಸಿ ಪೋಷಕರಿಗೆ ಶಾಲೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ದಾಖಲಾತಿ ಹೆಚ್ಚಾಗಲು ಪ್ರಯತ್ನಿಸಿದೆವು ಮತ್ತು ನಮ್ಮ ಪ್ರಯತ್ನ ಫಲಿಸಿದೆಂಬ ಭಾವನೆ ಬಾಸವಾಗುತ್ತಿದೆ.

   ಶಾಲೆಯು ಭೌತಿಕವಾಗಿ ಮತ್ತು ಶೈಕ್ಷಣಿಕವಾಗಿ ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ನನ್ನ ಮತ್ತು ಶಿಕ್ಷಕರಾದಿಯಾಗಿ ಹಲವಾರು ಕಂಪನಿಗಳಿಗೆ ಭೇಟಿ ನೀಡಿ ದಾನಿಗಳ ಹುಡುಕಾಟ ನಡೆಸುತ್ತಿದ್ದೆವು.

 ನಮ್ಮ ಕನಸು ನನಸಾಗಿಸುವ ಕೆಲಸವನ್ನು ಮಾಡಿದವರು "ಪ್ರಾಸ್ಟರ್ ಸೆನ್ಸಾರ್ ಟೆಕ್ನಾಲಜಿ" ಕಂಪನಿಯವರು ಶೌಚಾಲಯಕ್ಕೆ ಬಣ್ಣ ಬಳೆಯುತ್ತೇವೆಂದು ಬಂದವರು ಶಾಲೆಯ ಸಂಪೂರ್ಣ ಚಿತ್ರಣವನ್ನು ಬದಲಾಯಿಸಿದರು ಶಾಲೆಯನ್ನು ದತ್ತು ತೆಗೆದುಕೊಂಡು ದತ್ತು ಮಗುವೆಂದು ಕಾಣದೆ ಸ್ವಂತ ಮಗುವಿನ ರೀತಿ ಪೋಷಿಸಿದರು. ಅದರ ಪ್ರತಿಫಲವೇ ಇಂದಿನ ನಮ್ಮ ಕಂಗೊಳಿಸುತ್ತಿರುವ ಶಾಲೆ. ಶಾಲೆಗೆ ಪ್ರವೇಶಿಸುತ್ತಿದ್ದಂತೆ ವಾಲಿಬಾಲ್, ಖೋ ಖೋ ಅಂಕಣಗಳನ್ನು ಒಳಗೊಂಡ  ಸುಸಜ್ಜಿತವಾದ ಆಟದಮೈದಾನ,


ನಾಲ್ಕಾರು ಹೆಜ್ಜೆಗಳನ್ನು ಇಟ್ಟರೆ ಕಣ್ಣಿಗೆ ಗೋಚರಿಸುವ ಜ್ಞಾನಭರಿತವಾದ ಕುವೆಂಪು ರಂಗಮಂದಿರ

ಅದರ ಎಡ ಭಾಗದಲ್ಲಿ ವಾಹನ ನಿಲ್ದಾಣ,


ರಂಗಮಂದಿರದ  ಬಲಭಾಗಕ್ಕೆ ಇರುವ ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಕೊಠಡಿಗಳು,ಹಾಗೆ ನಮ್ಮೊಳಗೊಂದಾಗಿರುವ ಅಂಗನವಾಡಿ ಕೇಂದ್ರ.


 ಎರಡನೇ ಅಂಕಣಕ್ಕೆ ಪ್ರವೇಶಿಸಿದರೆ ಸುತ್ತಲೂ ಕಲ್ಲಿನ ಬೆಂಚುಗಳು





ಹಾಗೆ ಮುಂದೆ ಸಾಗಿದರೆ ಸ್ವಚ್ಛವಾದ ಮತ್ತು ಶುದ್ಧವಾದ ಕುಡಿಯುವ ನೀರನ್ನು ಒಳಗೊಂಡ ಸುಸಜ್ಜಿತವಾದ ಅಡುಗೆಮನೆ.


ಅಡುಗೆಮನೆ ಹಿಂಭಾಗ ಗಂಡು,ಹೆಣ್ಣು ಮತ್ತು ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಇರುವ ಪ್ರತ್ಯೇಕ ಶೌಚಾಲಯ ಸಂಕಿರಣ ಕಾಣುತ್ತದೆ



ಅದಕ್ಕೆ ಹೊಂದಿಕೊಂಡಂತೆ ಸುಂದರವಾದ ಹೂ ತೋಟ  ಸ್ವಚ್ಛವಾದ ಸಿಂಕನ್ನು ಕಾಣಬಹುದು.
        ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು ತರಗತಿಗೆ 3 ಕೊಠಡಿಗಳನ್ನು ಬಳಸಿಕೊಳ್ಳಲಾಗಿದ್ದು ಇನ್ನುಳಿದ 9 ಕೊಠಡಿಗಳನ್ನು ಸುವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಕಲಿಸು ಫೌಂಡೇಶನ್ ವತಿಯಿಂದ ಗ್ರಂಥಾಲಯಕ್ಕೆ ಟೇಬಲ್



ಕಪಾಟುಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಓದುವ ವಾತಾವರಣ ನಿರ್ಮಿಸಿ ಕೊಟ್ಟರು,

ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ವಿಜ್ಞಾನ ಪ್ರಯೋಗಾಲಯ



ಸ್ಮಾರ್ಟ್ ಬೋರ್ಡ್ ಬಳಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗಗನಕುಸುಮವಲ್ಲ ಬದಲಿಗೆ ಅದರ ಮೂಲಕ ಕಲಿಕೆ ಸಾಧ್ಯ ಎಂಬುದನ್ನ  ಪ್ರಾಶ್ಚರ್ ಸೆನ್ಸಾರ್ ಕಂಪನಿಯವರು ನಮ್ಮ ಶಾಲೆಯಲ್ಲಿ ನನಸಾಗಿಸಿದ್ದಾರೆ


 ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಿಂದ ಶಾಲಾ ವೆಬ್ಸೈಟ್ (ghskumbarkoppalmysorenorth.netlify.app) ಕ್ರಿಯೇಟ್ ಮಾಡಿದ್ದು ನಮ್ಮ ಶಾಲೆಗೆ ಹೆಮ್ಮೆಯ ವಿಷಯವಾಗಿದೆ. ಇನ್ನು ಕಲಿಕೆಗೆ ಪೂರಕವಾದ ವಿಶಾಲವಾದ ತರಗತಿ ಕೊಠಡಿಗಳನ್ನ ಹೊಂದಿದ್ದು, ಗ್ರೀನ್ ಬೋರ್ಡ್ಗಳು, ಬೆಳಕಿನ ವ್ಯವಸ್ಥೆ, ಫ್ಯಾನ್ಗಳು. ಎಲೆಕ್ಟ್ರಿಕಲ್  ಬೆಲ್  ವ್ಯವಸ್ಥೆ ಇದೆ.

      ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ನಮ್ಮ ಶಾಲಾ ಮಂತ್ರಿಮಂಡಲ ಮೈದಾನದ ಸ್ವಚ್ಛತೆ, ಗಿಡಗಳಿಗೆ ನೀರು, ಊಟವನ್ನು ಮಾಡಲು ಸ್ವಚ್ಛಂದವಾದ  ಭೋಜನಾಲಯದ ಶಾಂತಿಯುತ ನಿರ್ವಹಣೆಯನ್ನು


ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದೆ.

ಪ್ರಾರ್ಥನಾ ಅವಧಿಯಲ್ಲಿ ನಾಡಗೀತೆ ರಾಷ್ಟ್ರಗೀತೆಯನ್ನ ಬ್ಯಾಂಡ್ಸೆಟ್ ತಂಡದೊಂದಿಗೆ ದೈಹಿಕ ಶಿಕ್ಷಕರಾದ ಪ್ರವೀಣ್ ರವರ ತರಬೇತಿಯಿಂದ ಮೊಳಗುತ್ತದೆ. ವಾರ್ತಾ ಪತ್ರಿಕೆ ಓದುವಿಕೆ ರಸಪ್ರಶ್ನೆ ಹಾಗೂ ವಿದ್ಯಾರ್ಥಿಗಳ ಹುಟ್ಟು ಹಬ್ಬದ ಶುಭಾಶಯಗಳು ಜೊತೆಗೆ ಸಮಾಜ ಶಿಕ್ಷಕರಾದ ಪ್ರಭು ಸ್ವಾಮಿಯವರ ಉಡುಗೊರೆಗಳು ಪುಸ್ತಕ ಮತ್ತು ಪೆನ್ನಿನ  ರೂಪದಲ್ಲಿ ಮಕ್ಕಳಿಗೆ ತಲುಪುತ್ತವೆ.

ಆಟದ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನ ನೀಡುತ್ತಿದ್ದು ಕಬಡ್ಡಿ,ಖೋ ಖೋ,ಅಥ್ಲೆಟಿಕ್ಸ್ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಬಹುಮಾನಗಳಿಸಿರುತ್ತಾರೆ ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆಗೆ ಇವರ ಶ್ರಮ ಹೊಗಳಿಕೆಗೆ ಪಾತ್ರವಾದದ್ದು.

 ಇನ್ನು ಭೌತಿಕ ಅಭಿವೃದ್ಧಿಯಾಗಿದ್ದರೂ ಶೈಕ್ಷಣಿಕವಾಗಿ ಪ್ರಗತಿ ಹೊಂದದ ಹೊರತು ಇವೆಲ್ಲ ನಗಣ್ಯ ಎಂಬಂತೆ ನಮ್ಮ ಶಾಲೆ ಅದಕ್ಕೆ ಹೊರತಾಗಿಲ್ಲ ಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ 2020, 21ನೇ ಸಾಲಿನಲ್ಲಿ 94%. 2021, 22 ನೇ ಸಾಲಿನಲ್ಲಿ 96% ಹಾಗೂ 2022,23 ನೇ ಸಾಲಿನಲ್ಲಿ 80ರಷ್ಟು  ಇದ್ದು ಶಾಲೆಯ ದಾಖಲಾತಿ ಹೆಚ್ಚಿಸಲು ಮಾನದಂಡವಾಯಿತು, ಜೊತೆಗೆ ಸತತವಾಗಿ ಮೂರು ವರ್ಷಗಳ ಕಾಲ ನಮ್ಮ ಶಾಲೆಯ ವಿದ್ಯಾರ್ಥಿಗಳಾದ 1.ಚಂದನ್.ಎಸ್ , 2.ಶ್ರೀಶಾಂತ್, 3.ಕಾವ್ಯ ತಾಲೂಕಿನ Topper ಗಳಾಗಿ ಹೊರಹೊಮ್ಮಿ ಸರಕಾರದ ವತಿಯಿಂದ ನೀಡುವ LAPTOP ಅನ್ನು ಪಡೆದಿರುತ್ತಾರೆ.ಈ ಬಾರಿ  ನಮ್ಮ ಶಾಲೆಯ ವಿದ್ಯಾರ್ಥಿ  ವೈದೇಶ್ ಕುಮಾರ್   ತಾಲೂಕಿನ Topper ಆಗಿ ಹೊರಹೊಮ್ಮಿದ್ದಾನೆ ಮತ್ತು ಸರಕಾರದ ವತಿಯಿಂದ ನೀಡುವ LAPTOP ಅನ್ನು ಪಡೆಯುವನು.

ಹನಿ ಹನಿ ಗೂಡಿದರೆ ಹಳ್ಳ ಎಂಬುವಂತೆ ಶಾಲೆಯ ಶೈಕ್ಷಣಿಕ ಮತ್ತು ಭೌತಿಕ ಪ್ರಗತಿಗೆ ನನ್ನ ನೆಚ್ಚಿನ ಶಿಕ್ಷಕರುಗಳಾದ ರಿಜ್ವಾನ ತಬಸುಮ್, ಸುಮಿತ್ರ  P, ನಾಗರಾಜಪ್ಪ M M, ಪ್ರಭುಸ್ವಾಮಿ M,ಅರುಣ್ ಕುಮಾರ್ M, ರೇಖಾ D R, ಪ್ರವೀಣ್ K S ಜೊತೆಗೆ ಕಚೇರಿ ಸಿಬ್ಬಂದಿ ವರ್ಗದವರಾದ ಪ್ರಭ ಮತ್ತು ಡಿ ಗ್ರೂಪ್ ಸಿಬ್ಬಂದಿ ಲತಾ ಹಾಗೂ ಅಡುಗೆ ಸಿಬ್ಬಂದಿಯವರುಗಳ  ಕಾರ್ಯವೈಕರಿ ಮೆಚ್ಚುವಂತದ್ದು.

ಸದಾ ನಮ್ಮ ಶಾಲೆಗೆ ಸಲಹೆ ಮಾರ್ಗದರ್ಶನ  ನೀಡುತ್ತಾ ಬಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಕೃಷ್ಣರವರು ಹಾಗೂ ಕುಂಬಾರ ಕೊಪ್ಪಲು ಗ್ರಾಮದ ಹಿರಿಯರು,ಸ್ಥಳೀಯ ಕಾರ್ಪೊರೇಟರ್ಗಳು ಹಾಗೂ ನನ್ನ ಕನಸಿಗೆ ಒತ್ತಾಸೆಯಾಗಿ ನಿಂತಿರುವ ನಮ್ಮ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಫ್ರಾಚ್ಚರ್ ಸೆನ್ಸರ್ ಟೆಕ್ನಾಲಜಿಸ್ ಕಂಪನಿಯವರು  ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿರುತ್ತಾರೆ ಹಾಗಾಗಿ ಈ ಸಂದರ್ಭದಲ್ಲಿ ಅವರನ್ನೆಲ್ಲ ನೆನಪಿಸಿಕೊಳ್ಳುತ್ತ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.